ತುಮಕೂರು: ನಗರದ ಹೊರ ವಲಯದಲ್ಲಿರುವ ಬಡಾವಣೆಗಳ ಅಭಿವೃದ್ಧಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅನುದಾನ ಬಳಕೆ ಮಾಡುತ್ತಿದ್ದು, ಸಿದ್ದರಾಮೇಶ್ವರ್ ಬಡಾವಣೆ ಒಂದಕ್ಕೆ ಸರಕಾರದ ವಿವಿಧ ಇಲಾಖೆಗಳು ಹಾಗೂ ಲೆಕ್ಕ ಶೀರ್ಷಿಕೆಯಲ್ಲಿ ಸುಮಾರು 10 ಕೋಟಿ ರೂ. ಗಳಿಗೆ ಹೆಚ್ಚಿನ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಶಾಸಕರ ವಿವೇಚನಾ ಕೋಟಾ ಆಡಿಯಲ್ಲಿ ನೀಡಲಾಗಿದ್ದ ಸುಮಾರು 50 ಕೋಟಿ ರೂ. ಗಳ ಅನುದಾನದಲ್ಲಿ 1.60 ಕೋಟಿ ರೂ. ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಹಂತ ಹಂತವಾಗಿ ಬಡಾವಣೆಯ ಒಳಭಾಗದ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಕಳೆದ 22 ವರ್ಷಗಳ ಹಿಂದೆ ನಗರಸಭೆಗೆ ಸೇರಿಕೊಂಡ ಮರಳೂರು, ದಿಬ್ಬೂರು, ಡಿ.ಎಂ.ಪಾಳ್ಯ, ಸತ್ಯಮಂಗಲ ಸೇರಿದಂತೆ ಹಲವಾರು ಬಡಾವಣೆಗಳು ಅನುದಾನದ ಕೊರತೆಯಿಂದ ಇದುವರೆಗೂ ಸುಸಜ್ಜಿತ ರಸ್ತೆ, ಚರಂಡಿ ಕಾಣಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ನೀಡಿದ ವಿವಿಧ ಅನುದಾನಗಳಲ್ಲಿ ಸಿದ್ದರಾಮೇಶ್ವರ್ ಬಡಾವಣೆ ಮತ್ತು ಪಕ್ಕದ ಬಡಾವಣೆಗಳ ಮುಖ್ಯರಸ್ತೆ ಅಭಿವೃದ್ಧಿಗೆ ಸುಮಾರು 10 ಕೋಟಿ ವಿನಿಯೋಗಿಸಲಾಗಿದೆ. ಅಲ್ಲದೆ ಸರಕಾರದ ಇನ್ನಿತರ ಅನುದಾನದಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ಈ ವೇಳೆ ಪಾಲಿಕೆಯ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಸಿದ್ದರಾಮೇಶ್ವರ ಬಡಾವಣೆ ನಾಗರಿಕರ ಹಿತರಕ್ಷಣಾ ಸಮಿತಿ ಸದಸ್ಯರು ಹಾಜರಿದ್ದರು.
Comments are closed.