ಕೊರಟಗೆರೆ: ಸಾಕು ಪ್ರಾಣಿ ಮತ್ತು ರೈತರ ಮೇಲೆ ಪದೇ ಪದೆ ದಾಳಿ ಮಾಡುತ್ತೀದ್ದ ಚಿರತೆಗಳು ಕಳೆದ ಒಂದು ವಾರದೊಳಗೆ ಪ್ರತ್ಯೇಕ ಎರಡು ಕಡೆಗಳಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ. ಚಿರತೆ ಕಾಟದಿಂದ ಬೆಚ್ಚಿ ಬಿದ್ದಿದ್ದ ರೈತಾಪಿವರ್ಗ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿವರ್ಗ ಚಿರತೆಯ ಸೇರೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಕೆರೆಯ ಸಮೀಪದ ಬಸವನ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಭಾನುವಾರ ರಾತ್ರಿ ಚಿರತೆ ಸೆರೆಯಾಗಿದೆ. ಸೆರೆಯಾದ ಚಿರತೆ ನೋಡಲು ಜನರ ದಂಡೆ ಸ್ಥಳಕ್ಕೆ ಹರಿದುಬಂದಿತ್ತು. ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.
ಕಳೆದ 10 ದಿನಗಳ ಹಿಂದೆಯಷ್ಟೇ ಹಸುವಿನ ದೊಡ್ಡಿಯಲ್ಲಿ ಹಾಲು ಕರೆಯುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿದ್ದ ಚಿರತೆ ಡಿ.27 ರಂದು ತಂಗನಹಳ್ಳಿ ಸಮೀಪದ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಮನುಷ್ಯನ ರಕ್ತದ ರುಚಿ ಕಂಡಿದ್ದ ಚಿರತೆಯ ಸೆರೆಯಿಂದ ಕೋಳಾಲ ಭಾಗದ ಸ್ಥಳೀಯ ರೈತಾಪಿವರ್ಗ ಮತ್ತು ಮಕ್ಕಳು ನಿಟ್ಟಿಸಿರು ಬಿಟ್ಟಿದ್ದಾರೆ.
ಕೊರಟಗೆರೆಯ ಹಿರೇಬೆಟ್ಟ, ಚನ್ನರಾಯನ ದುರ್ಗ, ತಿಮ್ಮಲಾಪುರ ಅಭಯಾರಣ್ಯ, ದೇವರಾಯನ ದುರ್ಗದ ಅರಣ್ಯ ಪ್ರದೇಶವಿದೆ. ಅರಣ್ಯದ ಸಮೀಪವೇ ಗ್ರಾಮಗಳಿದ್ದು ಕಾಡು ಪ್ರಾಣಿ ನಾಡಿಗೆ ಬರೋದು ಸಾಮಾನ್ಯ. ಅರಣ್ಯ ಸಮೀಪ ವಾಸಿಸುವ ರೈತಾಪಿವರ್ಗ ಸಾಕು ಪ್ರಾಣಿಗಳ ಬಗ್ಗೆ ಜಾಗೃತಿ ವಹಿಸಬೇಕಿದೆ. ಚಿರತೆ ಅಥವಾ ಕರಡಿ ಕಂಡಾಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಮನವಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸೈ ಚೇತನ್ಗೌಡ, ಉಪ ವಲಯ ಅರಣ್ಯಾಧಿಕಾರಿ ನಾಗರಾಜು, ಅರಣ್ಯ ರಕ್ಷಕ ಮಂಜುನಾಥ, ಸಿದ್ದೇಶ್, ಬಾಬು, ಹನುಮಂತರಾಯಪ್ಪ, ರಘು ಸೇರಿದಂತೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದರು.
Comments are closed.