ವಿದ್ಯಾರ್ಥಿಗಳು ಸತ್ಯದ ಬಗ್ಗೆ ಕನಸು ಕಟ್ಟಿಕೊಳ್ಳಲಿ

ಕಲಾಂ, ವಿವೇಕಾನಂದರ ವ್ಯಕ್ತಿತ್ವ ರೂಡಿಸಿಕೊಳ್ಳಿ: ವೀರೇಶಾನಂದ ಶ್ರೀ

206

Get real time updates directly on you device, subscribe now.


ತುಮಕೂರು: ನಾಲ್ಕು ಗೋಡೆಗಳ ನಡುವಿನ ಜೀವನ ಮುಗಿಸಿ ಮಾಸ್ಟರ್ಸ್ ಆಗಲು ಹೊರಟಿರುವ ವಿದ್ಯಾರ್ಥಿಗಳು ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದರ ಜೀವನಾದರ್ಶ, ವ್ಯಕ್ತಿತ್ವ, ತತ್ವ, ಆತ್ಮವಿಶ್ವಾಸ, ನಡವಳಿಕೆ, ಆಲೋಚನೆ, ಸರಿ ಆಯ್ಕೆಗಳನ್ನು ಅಳವಡಿಸಿಕೊಂಡರೆ ಅದುವೇ ನಿಮ್ಮ ಬೆಳವಣಿಗೆಯ ಮೇಲೆ ಪ್ರಭಾವ ಬೀರಲಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ಘಟಕ ಐಕ್ಯೂಎಸಿ ಮತ್ತು ಪಿಎಂಇಬಿ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ “ಅನಿಕೇತನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಎಂಬುದು ಋಣ ಸಂದಾಯವಿದ್ದಂತೆ ಎಂಬ ವಿವೇಕಾನಂದರ ಮಾತುಗಳನ್ನು ನಾವು ಮರೆಯಬಾರದು. ಯೌವ್ವನ ಎಂದರೆ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ನೈತಿಕವಾಗಿ ಸದೃಢರೂ ಸಬಲರೂ ಆಗಿರುವ ವಯೋಮಾನ. ಇವೆಲ್ಲವೂ ಸಕಾರಾತ್ಮಕವಾಗಿ ಬಳಕೆಯಾಗುವುದು ಶಿಕ್ಷಣದಿಂದ. ಪ್ರಬುದ್ಧ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರ ಕಟ್ಟಲು ಶಿಕ್ಷಣದಿಂದ ಮಾತ್ರವೇ ಸಾಧ್ಯ ಎಂದರು.

ಸಕಾರಾತ್ಮಕ ಚಿಂತನೆಗಳಿಂದಷ್ಟೇ ಬದುಕು ಕಟ್ಟಲು ಸಾಧ್ಯ. ಸತ್ಯದ ಬಗ್ಗೆ ಕನಸು ಕಟ್ಟಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಅವಕಾಶ ವಂಚಿತರಾಗದೆಯೇ ಅದ್ಭುತ ದೃಷ್ಟಿಕೋನದ ಶಿಕ್ಷಣಕ್ಕೆ ಬೆಲೆಕೊಟ್ಟು, ಶಿಕ್ಷಣದ ನಿಜವಾದ ಉದ್ದೇಶ ತಿಳಿದುಕೊಂಡಾಗಲೇ ಪ್ರತಿಯೊಬ್ಬರೂ ವಿಕಸನಗೊಳ್ಳುವುದು ಎಂದು ತಿಳಿಸಿದರು.

ಭಾವನಾತ್ಮಕ ಬೌದ್ಧಿಕ ಸಾಮಾಜಿಕ ಸಂಬಂಭ ಬದುಕು ರೂಪಿಸುತ್ತದೆ. ತಾಯಿ ಮೊದಲ ಗುರುವಾದರೆ, ಶಿಕ್ಷಕ ಪೂರ್ಣ ಬದುಕಿನ ಗುರುವಾಗುತ್ತಾನೆ. ಶಿಕ್ಷಣ ಸಂಬಂಭಗಳು ಜೀವನದ ಕುರಿತು ಸ್ವಾಮಿ ವಿವೇಕಾನಂದರು ಹೇಳಿರುವ ವಿಚಾರಗಳನ್ನು ವಿದ್ಯಾರ್ಥಿಗಳು ಅರಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಕುಲಸಚಿವ ಪ್ರೊ.ಕೇಶವ ಮಾತನಾಡಿ, ಅಸ್ತಿತ್ವ ಮತ್ತು ಜ್ಞಾನವೇ ಅನಂತ ಮಾರ್ಗ. ನಮ್ಮ ವಿಶ್ವವಿದ್ಯಾಲಯದ ಸಂಪನ್ಮೂಲ ಬಳಸಿಕೊಂಡು ಸಾಧನೆ ಮಾಡಿ, ಮುಂದಿನ ಎರಡು ವರ್ಷ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದರಲ್ಲಿ ನಮ್ಮ ಸಂಸ್ಥೆ ಮೈಲಿಗಲ್ಲಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ನೂರಾರು ಕನಸುಗಳನ್ನು ಹೊತ್ತು ನಮ್ಮ ಸಂಸ್ಥೆಗೆ ಸೇರಿದ್ದೀರಿ. ವಿಶ್ವವಿದ್ಯಾಲಯದ ಘನತೆ, ಗೌರವ, ಶಿಸ್ತು ಕಾಪಾಡುವಲ್ಲಿ ಹಿಂದೆ ಬೀಳಬೇಡಿ. ಎಲ್ಲಾ ವಿದ್ಯಾರ್ಥಿಗಳಿಗೂ ನಾವೇ ಪೋಷಕರು. ನಿಮ್ಮ ತಪ್ಪುಗಳನ್ನು ಸರಿಪಡಿಸಿ, ಸರಿ ದಾರಿಯತ್ತ ಕೊಂಡೊಯ್ಯುವಲ್ಲಿ, ಸಮಾಜಮುಖಿ ಶಿಲ್ಪಿಗಳಾಗಿ ನಿಮ್ಮನ್ನುರೂಪಿಸುವಲ್ಲಿ ನಮ್ಮ ಶಿಕ್ಷಕರು ಹಗಲಿರುಳು ಶ್ರಮಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳೆಲ್ಲರೂ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ಪ್ರಸನ್ನಕುಮಾರ್.ಕೆ, ವಿದ್ಯಾರ್ಥಿ ಕ್ಷೇಮ ಪಾಲನ ಘಟಕದ ನಿರ್ದೇಶಕ ಪ್ರೊ.ಪಿ.ಪರಮಶಿವಯ್ಯ, ಐಕ್ಯೂಎಸಿ ನಿರ್ದೇಶಕ ಡಾ.ರಮೇಶ್.ಬಿ, ಪಿಎಂಇಬಿ ನಿರ್ದೇಶಕ ಡಾ.ಬಿ.ಟಿ.ಸಂಪತ್ಕುಮಾರ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರೂಪೇಶ್ಕುಮಾರ್, ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!