ನಾನು ನಾಯಕಿ ಕಾರ್ಯಕ್ರಮ ಜ.16 ಕ್ಕೆ

162

Get real time updates directly on you device, subscribe now.


ತುಮಕೂರು: ಬೆಂಗಳೂರಿನಲ್ಲಿ ಜನವರಿ 16 ರಂದು ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕ ಆಯೋಜಿಸಿರುವ ನಾನು ನಾಯಕಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕಗಳ ಸಕ್ರಿಯ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಮನವಿ ಮಾಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ನಾನು ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ನಾವು ಕಾಣಬಹುದಾಗಿದೆ. ಉಕ್ಕಿನ ಮಹಿಳೆ ಎಂದು ಕರೆಯಿಸಿಕೊಂಡಿರುವ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರು ಕೇಳಿದರೆ ಇಂದಿಗೂ ಮೈ ನವಿರೇಳುತ್ತದೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಜನವರಿ 16ರ ಸೋಮವಾರ ನಾನು ನಾಯಕಿ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಅವರು ಪಾಲ್ಗೊಳ್ಳಲಿದ್ದು, ಸಕ್ರಿಯ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ, ತಾಲೂಕು ಘಟಕಗಳ ಮಹಿಳಾ ಕಾರ್ಯಕರ್ತರು ಶ್ರಮಿಸಬೇಕೆಂದರು.

ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳಿಂತ ದೇಶದ ಎಲ್ಲಾ ರಂಗಗಳಲ್ಲಿಯೂ ದುಡಿದು ಸೈ ಎನಿಸಿಕೊಂಡ ಮಹಿಳೆಯರು ಅಡುಗೆ ಮನೆ ನಿಭಾಯಿಸಲಾಗದೆ ಕಂಗಾಲಾಗಿದ್ದಾರೆ. ಅಡುಗೆ ಎಣ್ಣೆ, ಅಡುಗೆ ಅನಿಲ ಬೆಲೆ ಹೆಚ್ಚಳ, ದಿನಸಿ ಪದಾರ್ಥಗಳ ಬೆಲೆ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳಿಂದ ಮಹಿಳೆಯರು ತತ್ತರಿಸಿ ಹೊಗಿದ್ದಾರೆ. ತನ್ನ ಮಕ್ಕಳು, ಗಂಡನಿಗೆ ರುಚಿಕರ ಮತ್ತು ಪೌಷ್ಠಿಕ ಆಹಾರ ಮಾಡಿ ಬಡಿಸಬೇಕೆಂದರೂ ದುಡಿದ ಹಣ ಸಾಕಾಗುತ್ತಿಲ್ಲ. ಜನ ಸಾಮಾನ್ಯರು ದಿನದಿಕ್ಕೆ ಸಾಲದ ಶೂಲಕ್ಕೆ ಸಿಲುಕಿ ನೆಮ್ಮದಿಯ ಜೀವನ ಕಳೆದುಕೊಳ್ಳುತ್ತಿದ್ದಾರೆ. ಆದರೆ ಮೋದಿ ಆಪ್ತರಾಗಿರುವ ಉದ್ಯಮಿಗಳ ಸಂಪತ್ತು ಮಾತ್ರ ಎಗ್ಗಿಲ್ಲದೆ ಏರುತ್ತಿದೆ. ಇವುಗಳಿಗೆ ಕಾರಣ ಏನು ಎಂಬುದನ್ನು ಮಹಿಳೆಯರು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಆಯೋಜಿಸಿರುವ ಈ ನಾನು ನಾಯಕಿ ಕಾರ್ಯಕ್ರಮ ದಾರಿ ದೀಪವಾಗಲಿದೆ ಎಂದು ಗೀತಾ ರಾಜಣ್ಣ ತಿಳಿಸಿದರು.

ದೇಶದಲ್ಲಿ 2014ಕ್ಕೂ ಹಿಂದೆ ಇದ್ದ ಯುಪಿಎ ಸರಕಾರ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ದಿನಸಿ, ಇಂಧನ ಬೆಲೆ ಎಷ್ಟಿತ್ತು ಎಂಬುದು ನಾವುಗಳು ತುಲನೆ ಮಾಡಬೇಕಾಗಿದೆ. ಜನರಿಗೆ ಅದರಲ್ಲಿಯೂ ಯುವಕರಿಗೆ ಮತ್ತು ಮಹಿಳೆಯರಿಗೆ ಬಣ್ಣ ಬಣ್ಣದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರಕಾರ, ತಾನು ನೀಡಿದ್ದ ಭರವಸೆಗಳಿಗೆ ತದ್ವಿರುದ್ಧವಾದ ನೀತಿ ಜಾರಿಗೆ ತಂದು ಬಡವರು, ಹಸಿದವರು, ಮಧ್ಯಮ ವರ್ಗದವರ ಹೊಟ್ಟೆ ಉರಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ಶೇ.50ರ ಮತದಾರರಾಗಿರುವ ಮಹಿಳೆಯರು ಒಂದು ಮನಸ್ಸು ಮಾಡಬೇಕಾಗಿದೆ. ಇಂತಹ ಭ್ರಷ್ಟ ಬಿಜೆಪಿ ಸರಕಾರ ಕಿತ್ತೊಗೆದು ಜನರಪರವಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಅವಿರತ ಶ್ರಮಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲಿಯೇ ಮಹಿಳೆಯರು ಕಾರ್ಯಕ್ರಮ ಆಯೋಜಿಸಿದರೂ ನಾನು ಬರಲು ಸಿದ್ಧ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ನಾನು ನಾಯಕಿ ಎಂಬುದು ಪ್ರತಿಯೊಬ್ಬ ಮಹಿಳೆಯೂ ಗರ್ವ ಪಡುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಮಹಿಳಾ ಶಕ್ತಿ ಏನು ಎಂಬುದನ್ನು ಇಂದಿರಾ ಗಾಂಧಿಯವರ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟಿದೆ. ಹಾಗಾಗಿಯೇ ಅವರ ಮೊಮ್ಮಗಳಾದ ಪ್ರಿಯಾಂಕಗಾಂಧಿ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಯಿಸಿ, ಮತ್ತೊಮ್ಮೆ ಮಹಿಳಾ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸವನ್ನು ಕೆಪಿಸಿಸಿ ಮಾಡುತ್ತಿದೆ. ತಾವೆಲ್ಲರೂ ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಕೆಪಿಸಿಸಿ ವೈದ್ಯರ ಘಟಕದ ಡಾ.ರ್ಹಾನ, ರೈತ ಘಟಕದ ಜಿ.ಆರ್.ಗೌಡ, ಎಸ್ಸಿ ಘಟಕದ ಬಿ.ಜಿ.ಲಿಂಗರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸುವರ್ಣಮ್ಮ, ಸುವರ್ಣ, ಮರಿಚನ್ನಮ್ಮ ಮತ್ತಿರರು ಇದ್ದರು.

Get real time updates directly on you device, subscribe now.

Comments are closed.

error: Content is protected !!