ಭೋವಿ ಸಮುದಾಯ ಬಂಧುಗಳು ಜಾಗೃತರಾಗಲಿ

77

Get real time updates directly on you device, subscribe now.


ತುರುವೇಕೆರೆ: ಸಮುದಾಯದ ಅಸ್ಮಿತೆಗಾಗಿ ಎಲ್ಲರೂ ಜ್ಞಾನವಂತರಾಗುವ ಮೂಲಕ ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಿ ಎಂದು ಚಿತ್ರದುರ್ಗ ನಿರಂಜನ ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದಲ್ಲಿ ಭೋವಿ ಜನಾಂಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಿದ್ದರಾಮೇಶ್ವರ ಜಯಂತಿ ಮತ್ತು ಭೋವಿ ಸಮಾವೇಶ ಹಾಗೂ ಮಾತೃವಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದಾಯ ಬಂಧುಗಳು ಜಾಗೃತರಾಗಬೇಕಿದೆ. ಸಮುದಾಯದ ಹೆಣ್ಣು ಮಕ್ಕಳನ್ನು ಅತ್ಯಂತ ಗೌರವಯುತವಾಗಿ ಕಾಣುವ ಮೂಲಕ ಅಭಿವೃದ್ಧಿ ಹೊಂದಬೇಕಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಮುದಾಯ ಒತ್ತು ನೀಡಬೇಕು. ಪ್ರಚಲಿತ ವಿದ್ಯಾಮಾನ ಅರಿಯುವ ಮೂಲಕ ಸಮುದಾಯದ ಏಳಿಗೆಗೆ ಚಿತ್ತ ಹರಿಸಿ ಎಂದರು.

ಭೋವಿ ಓಸಿಸಿಐ ಅಧ್ಯಕ್ಷ ಮಾಕಳಿ ರವಿ ಮಾತನಾಡಿ, ನಮ್ಮ ಜನಾಂಗದ ಏಳಿಗೆಗೆ ಸದಾಶಿವ ಆಯೋಗ ಜಾರಿಯಾದರೆ ಮಾರಕವಾಗುತ್ತದೆ. ಈಗಾಗಲೇ ರಾಜಧಾನಿಯಲ್ಲಿ ಕೊರಮ, ಕೊರಚ, ಲಂಬಾಣಿ ಸಮುದಾಯದವ ರೊಡಗೂಡಿ ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಹೋರಾಟ ನಡೆಸಲಾಗಿದೆ. ಬಿಜೆಪಿ ಸರಕಾರ ಸದಾಶಿವ ಆಯೋಗ ವರದಿ ಜಾರಿಗೆ ಒಲವು ತೋರಿದರೆ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಅಂಬೇಡ್ಕರ್ ಅವರು ತೋರಿದ ಹಾದಿಯಲ್ಲಿ ಸಮುದಾಯದ ಶಿಕ್ಷಿತರಾಗುವ ಮೂಲಕ ಸಂಘಟಿತರಾಗಿ, ತಮ್ಮ ಹಕ್ಕುಗಳಿಗಾಗಿ ಹೋರಾಡುವ ಗುಣ ಬೆಳೆಸಿಕೊಳ್ಳಬೇಕಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮುದಾಯ ಪ್ರಗತಿ ಸಾಧಿಸಲಿ. ಭೋವಿ ಸಮುದಾಯದ ಏಳಿಗೆಗೆ ಪೂರಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಚಿತ್ರದುರ್ಗ ನಿರಂಜನ ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿಯನ್ನು ವೇದಿಕೆವರೆಗೂ ಮೆರವಣಿಗೆ ಮಾಡಲಾಯಿತು.

ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಮಹಾಲಿಂಗಯ್ಯ, ಬೋವಿ ಸಂಘದ ರಾಜ್ಯಾಧ್ಯಕ್ಷ ಗೌತಮ್ ವೆಂಕಿ, ಜಿಲ್ಲಾಧ್ಯಕ್ಷ ಉಮೇಶ್, ಓಂಕಾರ್, ಕೇಶವಾ ಭೋವಿ, ಗುರುಪಾದ್, ಹನುಮಂತಣ್ಣ, ತಾಲೂಕು ಪದಾಧಿಕಾರಿಗಳಾದ ಬಸವರಾಜ್, ಶಿವಲಿಂಗಯ್ಯ, ಉಪಾಧ್ಯಕ್ಷ ತಿರುಮಲಯ್ಯ, ಕಾರ್ಯದರ್ಶಿ ಮಂಜುನಾಥ, ಸಂಚಾಲಕ ಸುರೇಶ್, ಡಿ.ಬಿ.ಹಟ್ಟಿ ಗಿರೀಶ್ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!