ಶಿರಾ: ಜ.17 ಇಂದು ಸಂಜೆ 6-01 ನಿಮಿಷಕ್ಕೆ ಅಧಿಕೃತವಾಗಿ ಮಕರದಿಂದ ಕುಂಭಕ್ಕೆ ಶನಿ ಪಾದಾರ್ಪಣೆ ಮಾಡುತ್ತಿದ್ದಾನೆ ಎಂದು ಶ್ರೀಬಾಲಾಜಿ ದಿನದರ್ಶಿ ಸಂಪಾದಕರು ತಿಳಿಸಿದ್ದಾರೆ.
ಶನಿ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಗಳವರಿಗೆ ಶುಭಫಲವೂ ಹಲವು ರಾಶಿಗಳವರಿಗೆ ಅಶುಭಫಲವೂ ಲಭಿಸುತ್ತದೆ ಎಂದು ತಿಳಿಸಿದ್ದಾರೆ.
ಕುಂಭ ರಾಶಿಗೆ ಶನಿ ಬಂದಾಗ ಧನುರಾಶಿಗೆ ಸಾಡೇಸಾತಿ ಮುಗಿದು ಮೀನ ರಾಶಿಯವರಿಗೆ ಪ್ರಾರಂಭಗೊಳ್ಳುತ್ತದೆ. ಶನಿರಾಶಿ ಬದಲಿಸುವ ದಿನ ತಮಿಳುನಾಡಿನ ಪ್ರಸಿದ್ಧ ದೇಗುಲ ತಿರುನಲ್ಲಾರ್ ಶನಿದೇವರ ದೇವಾಲಯದಲ್ಲಿ ‘ಶನಿ ಪೆಯಾರ್ಚಿ’ ಉತ್ಸವ ನಡೆಯುತ್ತದೆ.
ಶನಿ ಕುಂಭ ರಾಶಿಯಲ್ಲಿ ಇದ್ದಾಗ ಮೇಷ, ಕನ್ಯಾ, ಧನು ರಾಶಿಗೆ ವಿಶೇಷ ಶುಭಫಲ ಉಂಟಾಗುತ್ತದೆ. ಮಿಥುನರಾಶಿಯವರಿಗೆ ಭಾಗ್ಯ ಶನಿ, ಕಟಕ ರಾಶಿಗೆ ಅಷ್ಟಮ ಶನಿಯಾದರೆ, ಸಿಂಹ ರಾಶಿಗೆ ಸಪ್ತಮ ಶನಿ, ತುಲಾ ರಾಶಿಗೆ ಪಂಚಮ ಶನಿ, ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಮ ಶನಿ, ಮಕರ, ಕುಂಭ, ಮೀನ ರಾಶಿಯವರಿಗೆ ಸಾಡೇಸಾತಿ ಇದ್ದರೆ, ವೃಷಭ ರಾಶಿಯವರಿಗೆ ಕರ್ಮ ಶನಿ ಪ್ರಭಾವವಿರುತ್ತದೆ ಎಂದಿದ್ದಾರೆ.
ಶನಿದೋಷವಿದ್ದಾಗ ವಿದ್ಯಾರ್ಥಿಗಳಿಗೆ ವಿದ್ಯಾಭಗ. ಅಧಿಕಾರಿ ವರ್ಗದವರಿಗೆ ಕಿರಿಕಿರಿ. ನಿರುದ್ಯೋಗಿಗಳಿಗೆ ಅಪವಾದ. ವ್ಯಾಪಾರಿಗಳಿಗೆ ಏರಿಳಿತ. ದಾಂಪತ್ಯ ಜೀವನದಲ್ಲಿ ಹಲವರಿಗೆ ತೊಂದರೆ, ಅತೃಪ್ತಿ, ಕಾರ್ಯವಿಳಂಬ, ಅಪಘಾತ ಭಯ, ಸುತ್ತಾಟ ಕಂಡು ಬರುತ್ತದೆ.
ಶನಿದೋಷ ಪರಿಹಾರಕ್ಕೆ ಆಂಜನೇಯ ದೇವರಿಗೆ ಪೂಜೆ ಮಾಡಿಸಬೇಕು. ಎಳ್ಳನ್ನು ದಾನ ಮಾಡಬೇಕು. ನೀಲಿವಸ್ತ್ರವನ್ನು ದೇವಾಲಯಕ್ಕೆ ಸಮರ್ಪಿಸಬೇಕು. ಶನಿದೇವರ ದೇವಾಲಯಗಳಲ್ಲಿ ತೈಲಾಭಿಷೇಕಕ್ಕೆ ಎಳ್ಳೆಣ್ಣೆಯನ್ನು ಕೊಡಬೇಕು. ಎಳ್ಳಿನಿಂದ ಮಾಡಿದ ಎಳ್ಳುಬತ್ತಿಯನ್ನು ಪ್ರತಿ ಶನಿವಾರ ಹಚ್ಚಬೇಕು. ಬಲಗೈ ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರವನ್ನು ಧರಿಸಬೇಕು.
ಪ್ರತಿದಿನ ಓಂ ಶಂ ಶನೈಶ್ಚರಾಯ ನಮಃ. ಎಂದು 108 ಬಾರಿ ಹೇಳಿಕೊಳ್ಳುವುದರಿಂದ ಒಂದಷ್ಟು ಶುಭಫಲಗಳನ್ನು ಪಡೆಯಬಹುದಾಗಿದೆ ಎಂದಿದ್ದಾರೆ.
Comments are closed.