ಶಿರಾ: ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದ ಸ್ಥಾಪನೆಯ ಕಾರಣಕರ್ತರು ಮತ್ತು ಆಡಳಿತ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಸಿ.ಎಸ್.ಶ್ಯಾಮಾ ಜೋಯಿಸ್ ರವರು ಮಂಗಳವಾರ ಬೆಳಗ್ಗೆ 11-30ರ ಸುಮಾರಿಗೆ ತುಮಕೂರಿನಲ್ಲಿ ನಿಧನ ಹೊಂದಿದರು.
ಮೂಲತಃ ಚಿತ್ರದುರ್ಗದವರಾದ ಇವರು, ಸಹಕಾರ ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿದ್ದರು. ಸೇವೆ ನಿವೃತ್ತಿ ನಂತರ ರಾಯರ ಪ್ರೇರೇಪಣೆಯಂತೆ ರಾಘವೇಂದ್ರ ಗುರುಗಳ ಮೃತ್ತಿಕಾ ಬೃಂದಾವನ ಸ್ಥಾಪನೆಗೆ ಅವಿರತವಾಗಿ ಶ್ರಮಿಸಿ, ಅದರಲ್ಲಿ ಯಶಸ್ವಿಯಾದರು. ಸ್ವತಃ ಕವಿಗಳೂ ಹಾಗೂ ಸಾಹಿತ್ಯಾಸಕ್ತರೂ ಆಗಿದ್ದ ಶ್ರೀಯುತರು ತಾಲ್ಲೂಕಿನ ವಿಪ್ರ ಸಂಘಟನೆಯಲ್ಲಿ ಮಾರ್ಗದರ್ಶಕರಾಗಿದ್ದರು.
ಜನಾನುರಾಗಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಪ್ರಾವಿಣ್ಯತೆ, ಚಿತ್ರದುರ್ಗ ಕೂಡಲಿ ಶ್ರೀಶಂಕರ ಮಠದಲ್ಲಿ ಶಾರದಾಂಬೆ ವಿಗ್ರಹಕ್ಕೆ ನೆರವಾಗಿದ್ದರು. ಮಂತ್ರಾಲಯದಲ್ಲಿ 8 ಲಕ್ಷ ದೇಣಿಗೆ ನೀಡಿ ಕೊಠಡಿ ನಿರ್ಮಿಸಲು ನೆರವಾದರು. ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಶಿರಾ ತಾಲ್ಲೂಕು ಆಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ಮೃತರು ಓರ್ವ ಪುತ್ರ, ಅಪಾರ ಶಿಷ್ಯ ವೃಂದ ಅಗಲಿದ್ದಾರೆ. ಇವರ ನಿಧನಕ್ಕೆ ಶಿರಾ ತಾಲ್ಲೂಕು ವಿಪ್ರ ಬಂಧುಗಳು, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಶಿರಾ ಅವಧೂತ ನರಸಿಂಹಾಚಾರ್ಯ ಅವರು ಸೇರಿದಂತೆ ಅಪಾರ ಭಕ್ತ ವೃಂದ ಕಂಬನಿ ಮಿಡಿದಿದ್ದಾರೆ.
Comments are closed.